ಚಮನ್ ಲಾಲ್ ಡುಂಗಾಜಿ, ಕನ್ನಡ ಚಲನಚಿತ್ರರಂಗದ ಮೊದಲ ವಾಕ್ಚಿತ್ರ "ಸತಿ ಸುಲೋಚನ" ದ ನಿರ್ಮಾಪಕರು. == ಹಿನ್ನಲೆ == ಮೂಲತಃ ರಾಜಾಸ್ತಾನದ ಮಾರ್ವಾಡಿ ಕುಟುಂಬಕ್ಕೆ ಸೇರಿದ ಚಮನ್ ಲಾಲ್ ಅವರು ೧೯೦೩ರಲ್ಲಿ ಬೆಂಗಳೂರಿಗೆ ಬಂದು ಚಿಕ್ಕಪೇಟೆಯಲ್ಲಿ ಪಾತ್ರೆಗಳ ವ್ಯಾಪಾರ ಶುರು ಮಾಡಿದರು. ೧೯೨೯ರಲ್ಲಿ ಶ್ರೀ ಸೌತ್ ಇಂಡಿಯಾ ಫಿಲ್ಮ್ ಕಂಪೆನಿ ಹೆಸರಿನಲ್ಲಿ ಚಲನಚಿತ್ರ ವಿತರಣಾ ಸಂಸ್ಥೆ ಪ್ರಾರಂಭಿಸಿ, ಅನೇಕ ಮೂಕಿ ಚಿತ್ರಗಳ ವಿತರಣೆಯನ್ನು ಮಾಡಿದರು. ೧೯೩೨ರಲ್ಲಿ ಸೌತ್ ಇಂಡಿಯಾ ಮೂವೀಟೋನ್ ಎಂಬ ಸಂಸ್ಥೆಯನ್ನು ಪ್ರಾರಂಭಿಸಿ ಕನ್ನಡದ ಪ್ರಥಮ ವಾಕ್ಚಿತ್ರ "ಸತಿ ಸುಲೋಚನ" ವನ್ನು ತಯಾರಿಸಿದರು. ಸುಮಾರು ೪೦,೦೦೦ ವೆಚ್ಚದಲ್ಲಿ ನಿರ್ಮಾಣವಾದಂಥಹ "ಸತಿ ಸುಲೋಚನ" ಚಿತ್ರವು ೧೯೩೪, ಮಾರ್ಚ್‌ ೩ ರಂದು ಬೆಂಗಳೂರಿನ ಪ್ಯಾರಾಮೌಂಟ್‌ ಚಿತ್ರಮಂದಿರದಲ್ಲಿ ಬಿಡುಗಡೆಯಾಯಿತು. == ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಗಳು == ಮೈಸೂರು ವಿಶ‍್ವವಿದ್ಯಾನಿಲಯದಲ್ಲಿ ವಾಣಿಜ್ಯ ವಿಭಾಗದಲ್ಲಿ ಉತ್ತಮ ಅಂಕ ಗಳಿಸಿದವರಿಗೆ ಚಮನ್ ಲಾಲ್ ಅವರ ಪರವಾಗಿ ೧೯೨೫ರಿಂದ ಪ್ರತಿ ವರ್ಷ ಬಂಗಾರದ ಪದಕ ನೀಡಲಾಗುತ್ತಿತ್ತು. ೧೯೧೮ರಲ್ಲಿ ಚಿಕ್ಕಪೇಟೆಯ ಆದಿನಾಥ ಜೈನ ಶ್ವೇತಾಂಬರ ಆಲಯವನ್ನು ಸ್ಥಾಪಿಸಿದರು. ಜೊತೆಗೆ ಅಂದಿನಿಂದ ನಿಧನರಾಗುವವರೆಗೂ ಬೆಂಗಳೂರು ಜೈನ ಶ್ವೇತಾಂಬರ ಸಂಘದ ಅಧ್ಯಕ್ಷರಾಗಿದ್ದರು. ಬೆಂಗಳೂರು ಪ್ರಾಣಿದಯಾ ಪ್ರಚಾರಕ ಸಂಘದ ಅಧ್ಯಕ್ಷರಾಗಿದ್ದ ಇವರು, ಕರಗ ಉತ್ಸವದ ಸಂದರ್ಭದಲ್ಲಿ ನಡೆಯುತ್ತಿದ ಪ್ರಾಣಿ ಬಲಿಯನ್ನು, ಸರ್ ಕೆ.ಪಿ. ಪುಟ್ಟಣ್ಣ ಶೆಟ್ಟರ ಜೊತೆ ಸೇರಿ ಪೂರ್ತಿಯಾಗಿ ನಿಲ್ಲಿಸಿದರು. == ನಿಧನ == ಚಮನ್ ಲಾಲ್ ಡುಂಗಾಜಿಯವರು ೧೯೩೫ರಲ್ಲಿ ಬೆಂಗಳೂರಿನಲ್ಲಿ ನಿಧನ ಹೊಂದಿದರು. == ಉಲ್ಲೇಖಗಳು ==